Saturday 12 September, 2015

European Robin

ಬಹಳ ಸಮಯದ ನಂತರ ಬ್ಲಾಗ್ ಪುಟವನ್ನು ಇಂದು ತೆರೆದು ನೋಡಿದ್ದು !! ಏನಾದರೂ ಪ್ರಕಟಿಸೋಣ ಎಂದು ಯೋಚಿಸುತ್ತಿರುವಾಗ ತಟ್ಟನೆ ಹೊಳೆದಿದ್ದು ಇತ್ತೀಚಿಗೆ ಕ್ಯಾಮೆರಾದಲ್ಲಿ ಸೆರೆ ಹಿಡಿದ ಈ ಹಕ್ಕಿ. ಹೆಸರು European Robin (https://en.wikipedia.org/wiki/European_robin). ಕ್ಲಿಕ್ಕಿಸಿದ ಸ್ಥಳ Hyde Park, London.





Monday 1 July, 2013

ರಾಷ್ಟ್ರ ನಿರ್ಮಾಣ


ಭರತಖಂಡದ ಪರಂಪರೆ, ಅದರ ಈಗಿನ ಸ್ಥಿತಿ/ಕಾರಣ ಹಾಗು ಸಾಂಸ್ಕೃತಿಕ/ಸಾಮಾಜಿಕ ಜೇವನದ ಪುನರುದ್ಧಾರಕ್ಕೆ ಆಗಬೇಕಾದ ಕೆಲಸಗಳ ಕುರಿತು ಸ್ವಾಮಿ ವಿವೇಕಾನಂದರ ವಿಚಾರಗಳೇ "ರಾಷ್ಟ್ರ ನಿರ್ಮಾಣ".

ಪುಸ್ತಕದಲ್ಲಿ ವ್ಯಕ್ತ ಪಡಿಸಿದ ಕೆಲವು ವಿಚಾರಗಳು ಚೆನ್ನಗಿವೆ. ವಿಜ್ಞಾನ/ ಸಮಾಜ ಜ್ಞಾನದ ಜೊತೆಗೆ ಧರ್ಮ/ಆಧ್ಯಾತ್ಮ ಭೋಧನೆಯ ಅವಶ್ಯಕತೆ ಹಿಂದಿಗಿಂತಲೂ ಇಂದು ಬಹಳ ಬೇಕಾಗಿದೆ. ಸರಿಯಾದ ಮಾರ್ಗದರ್ಶನ/ ಮೂಲಭೂತ ಶಿಕ್ಷಣ ಇಲ್ಲದೆ ಇಂದಿನ ಯುವಕರು ದಾರಿ ತಪ್ಪುತಿದ್ದಾರೆ. ಸಂಸ್ಕಾರ ಶಿಕ್ಷಣವೆನ್ನುವುದು ಮನೆಯಿಂದಲೇ ಪ್ರಾರಂಭವಾಗಬೇಕು. ಆಗಲೇ ದೇಶಕ್ಕೆ/ರಾಷ್ಟ್ರ ನಿರ್ಮಾಣಕ್ಕೆ ಪ್ರಬುದ್ಧ/ಜವಾಬ್ದಾರಿಯುತ ನಾಗರಿಕರು ದೊರೆಯುವುದು.



ಪ್ರಕಾಶಕರು: ಶ್ರೀರಾಮಕೃಷ್ಣ ಆಶ್ರಮ, ಮೈಸೂರು - 570020

Monday 24 June, 2013

"ತುಮುಲ"

ತಾಯಿ ಮಮತೆ  - ಅದು ಯಾವ ದೇಶ/ಭಾಷೆ/ಜಾತಿಯಾಗಲಿ - ಬಹಳ ಶ್ರೇಷ್ಠವಾದದ್ದು. ತನ್ನ ಮಕ್ಕಳ ಹಿತಕ್ಕಾಗಿ ಎಂತಹ ತ್ಯಾಗ ಮಾಡಲೂ ಸಿದ್ಧವಿರುವ ಮಹಾನ್ ಜೀವ.


"ತುಮುಲ" ದಲ್ಲಿ ತಾಯಿ ಮಮತೆಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಹೆತ್ತ ಮಗನಲ್ಲದಿದ್ದರೂ, ರೂಪಿಂದರ್ ಹಾಗು ಸುಮತಿ ಮುಖೇಶನ ಮೇಲೆ ತೋರುವ ಪ್ರೀತಿ ತಾಯಿ ಹೃದಯವನ್ನು ಚೆನ್ನಾಗಿ ಬಣ್ಣಿಸಿದೆ. ಅದರಲ್ಲೂ ಸುಮತಿ, ತಾವು ಹೆತ್ತ ತಾಯಿ-ತಂದೆ ಅಲ್ಲ ಎಂದು ಮುಖೇಶನಿಗೆ ತಿಳಿದರೆ ಅವನೆಲ್ಲಿ ದೂರವಾಗುತ್ತಾನೋ ಎಂಬ ಭಯದಿಂದ ಅವನನ್ನು ಅಧಿಕೃತ ಮಗನನ್ನಾಗಿ ಮಾಡಲು ಹೂಡಿದ ಉಪಾಯ ಮೆಚ್ಚುವಂತದ್ದೆ. ಅಲ್ಲದೆ ರೊಪಿಂದರ್ ಗೆ ಮಾತು ಕೊಟ್ಟಂತೆ, ಕಷ್ಟ ಪಟ್ಟು ದುಡಿದು  ಮುಖೇಶನಿಗೆ ಸಂಸ್ಕಾರಯುತ ಶಿಕ್ಷಣ ನೀಡಿದ ಪರಿ ಹೆಣ್ಣಿನ/ತಾಯಿಯ ಮನೋಸ್ಥೈರ್ಯವನ್ನು ಚೆನ್ನಾಗಿ ನಿರೂಪಿಸಿದೆ.

ಒಂದು ಫೋಟೋದಿಂದಾಗಿ ಮುಖೇಶನ ಬದುಕಿನಲ್ಲಿ ಏಳುವ ತಲ್ಲಣಗಳೇ "ತುಮುಲ'.

"ತುಮುಲ' - ನಾನು ಓದಿದ, ಸುಧಾ ಮೂರ್ತಿಯವರ ಪ್ರಥಮ ಕಾದಂಬರಿ. ಅವರಿಗೆ ಭಾಷೆಯ ಮೇಲಿರುವ ಹಿಡಿತ ನೋಡಿ ಖುಷಿಯಾಯಿತು. ಬಹಳ ಸರಳವಾದ ಭಾಷೆಯ ಮೂಲಕ ಒಂದು ಉತ್ತಮ ಕಥೆ/ಸಂದೇಶ ನೀಡಿದ್ದಾರೆ.


ಪ್ರಕಾಶಕರು: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - 560009
ಲೇಖಕರು: ಸುಧಾ ಮೂರ್ತಿ 

Monday 17 June, 2013

ನಾ ಕಂಡ ಅಂಡಮಾನ್

"ಅಂಡಮಾನ್" ಎಂದ ಕೂಡಲೇ ಬಹುತೇಕ ಜನರಿಂದ ಬರುವ ಪ್ರತಿಕ್ರಿಯೆ - ಅದೊಂದು ದೂರದ, ಕಾಡು ಜನರಿರುವ ಪ್ರದೇಶ ಎಂದು...ಅಂಡಮಾನ್ ಬಗ್ಗೆ ತಿಳಿಯಲು ಪ್ರಯತ್ನಿಸದೆ ಇರುವವರ ಅಭಿಪ್ರಾಯ - ಎಷ್ಟೋ ವಿದ್ಯಾವಂತರದ್ದೂ ಕೂಡ!! ಇಂತ ಅಂಡಮಾನ್ ಪ್ರವಾಸ ಕೈಗೊಳ್ಳಲು ನಾನು ಮಡದಿಯೊಡನೆ ಹೊರಟು ನಿಂತೆ .. ಮಡದಿಯೊಡನೆ ಕೈಗೊಂಡ ಪ್ರಥಮ ಪ್ರವಾಸ..
ಮದುವೆಯ ನಂತರ ಹೆಚ್ಚಿನ ಮಿತ್ರರು/ನೆಂಟರು ಶಿಮ್ಲಾ,ಮುನ್ನಾರ್, ಕಾಶ್ಮೀರ,ಊಟಿ ಹೋಗಿ ಬಂದಿದ್ದರು .. ನಾವು "change" ಇರಲಿ ಎಂದು ಅಂಡಮಾನ್ ದ್ವೀಪ ಸಮೂಹಕ್ಕೆ ಭೇಟಿ ನೀಡಲು ನಿಶ್ಚಯಿಸಿದೆವು.. ಇದಕ್ಕೆ ಸ್ಫೂರ್ತಿ ಪೂರ್ಣಚಂದ್ರ ತೇಜಸ್ವಿಯವರ "ಅಲೆಮಾರಿಯ ಅಂಡಮಾನ್" ಪ್ರವಾಸ ಕಥನ..

ಸ್ಥಳ ನಿಶ್ಚಯವಾದ ಮೇಲೆ ... ತಡ ಮಾಡದೆ ದಿನ ನಿಶ್ಚಯಿಸಿ ವಿಕ್ರಮ್ ಟ್ರಾವೆಲ್ಸ್ ನವರ ಪ್ಯಾಕೇಜ್ ಟೂರ್ ಆಯ್ಕೆ ಮಾಡಿಕೊಂಡು ಮುಂಗಡ ಟಿಕೆಟ್ ಕಾಯ್ದಿರಿಸಿದೆವು (ವಿಮಾನ ಪ್ರಯಾಣ ದರ ಏರುತ್ತಿತ್ತು ).. ಒಟ್ಟು ೭ಹಗಲು ೬ ರಾತ್ರಿಯ ಪ್ರವಾಸ ... ದಿನ ಸಮೀಪಿಸುತ್ತಿದ್ದಂತೆ ಪ್ರಯಾಣದ ತಯಾರಿಗಳನ್ನು ಮಾಡಿ ಮುಗಿಸಿ 'ಅಂಡಮಾನ್' ಹೇಗಿರಬಹುದು ಎಂದು ಊಹಿಸುತ್ತಿದ್ದೆ ....

Day 1 :
ದಿನ ಬಂದೇ ಬಿಟ್ಟಿತು ... ಮೊದಲ ದಿನ ಬೆಂಗಳೂರಿನಿಂದ ಚೆನ್ನೈಗೆ ಸಂಜೆಯ ಶತಾಬ್ಧಿ ರೈಲಿನಲ್ಲಿ ಪ್ರಯಾಣ .. ರೈಲಿನಲ್ಲಿ ಊಟೋಪಚಾರದ ವ್ಯವಸ್ಥೆ ಸೊಗಸಗಿತ್ತು... ರಾತ್ರಿ ಚೆನ್ನೈ ತಲುಪಿ ಹೋಟೆಲಿನಲ್ಲಿ (ರಾಜ್ ಭವನ್) ವಿಶ್ರಾಂತಿ ....

Day 2:


ಮರುದಿನ ಬೆಳಗೆದ್ದು ಉಪಹಾರ ಮುಗಿಸಿ, ವಿಮಾನ ನಿಲ್ದಾಣಕ್ಕೆ ಹೊರಟೆವು .. 10.30ಕ್ಕೆ ಜೆಟ್ ಏರ್ ವೇಸ್ ನಲ್ಲಿ ಪಯಣ .. ಅಂಡಮಾನ್ ಭೂ ಭಾಗ ಸಮೀಪಿಸುತ್ತಿದ್ದಂತೆ ವಿಮಾನದ ಕಿಟಕಿಯಿಂದ ಕಂಡ ದೃಶ್ಯ ತುಂಬಾ ಚೆಂದ ಇತ್ತು !! .. 12.30 ಕ್ಕೆ ಪೋರ್ಟ್ ಬ್ಲೇರ್ ನ ವೀರ ಸಾವರ್ಕರ್ ವಿಮಾನ ನಿಲ್ದಾಣದಲ್ಲಿಳಿದೆವು ... ಈ ವಿಮಾನ ನಿಲ್ದಾಣ ಭಾರತೀಯ ವಾಯು ಸೇನೆಯ ನಿಯಂತ್ರಣ ದಲ್ಲಿ ಇರುವುದರಿಂದ ಇಲ್ಲಿ ಫೋಟೋ ಚಿತ್ರಿಸುವಂತಿಲ್ಲ ... ನಿಲ್ದಾಣದ ನಿರ್ಗಮನ ದ್ವಾರದಲ್ಲಿ ವಿಕ್ರಮ್ ಟ್ರಾವೆಲ್ಸ್ ನ ಮೊಯಿದೀನ್ ನಮಗಾಗಿ ಕಾಯುತ್ತಿದ್ದರು ...
palm grove resort









ಪೋರ್ಟ್ ಬ್ಲೇರ್ ನಲ್ಲಿ ನಮ್ಮ ವಾಸ್ತವ್ಯ - palm grove eco resort ನಲ್ಲಿ. ಊಟ ಮುಗಿಸಿ ಒಂದು ಸಣ್ಣ ನಿದ್ರೆಗೆ ಜಾರಿದೆವು... ಸಂಜೆ 4 ಕ್ಕೆ ಅಂಡಮಾನ್ ದರ್ಶನ ಪ್ರಾರಂಭ .. ಮೊದಲ ಭೇಟಿ - ಮರೀನಾ ಪಾರ್ಕ್ ಗೆ. ಸಮುದ್ರ ದಂಡೆ ಯಂಚಿನಲ್ಲಿರುವ ಉದ್ಯಾನವನ ಹಾಗು ಜಲ ಕ್ರೀಡೆಯ ತಾಣ .. ಸಂಜೆಯ ತಂಗಾಳಿ ಬೀಸುತ್ತಿತ್ತು .. ಮೈ ಮನಕ್ಕೆ ಹಿತವೆನಿಸುತ್ತಿತ್ತು ...












ಸ್ವಲ್ಪ ಕಾಲ ವಿಹರಿಸಿ cellular jail ಕಡೆ ಹೊರಟೆವು .. ಇದು ಇಲ್ಲಿಯ ಪ್ರಮುಖ ತಾಣ .. ಅಂಡಮಾನ್ ಎಂದ ಕೂಡಲೇ ನೆನಪಿಗೆ ಬರುವುದೇ ಈ ಜೈಲ್ !!! ಸ್ವಾತಂತ್ರ್ಯ ಯೋಧರನ್ನು ಕೂಡಿ ಹಾಕಿ ಹಿಂಸೆ ನೀಡುತ್ತಿದ್ದ ಜಾಗ!! "Cellular Jailನಲ್ಲಿ ಪ್ರತಿದಿನ ಸಂಜೆ "ಧ್ವನಿ-ಬೆಳಕಿನ" ಕಾರ್ಯಕ್ರಮವಿದೆ. ಜೈಲಿನ ಇತಿಹಾಸ ಹಾಗು ಅಲ್ಲಿ ಸೆರೆವಾಸ ಅನುಭವಿಸಿದ ಸ್ವಾತಂತ್ರ್ಯ ಯೋಧರ ಕಷ್ಟ ಕಾರ್ಪಣ್ಯ ಗಳನ್ನು ಆಂಗ್ಲರ ದಬ್ಬಾಳಿಕೆಯನ್ನು ಧ್ವನಿ-ಬೆಳಕಿನ ಮೂಲಕ ವಿವರಣೆ .. ಜೈಲಿನ ಆವರಣದಲ್ಲಿರುವ ಒಂದು ಆಲದ ಮರವನ್ನು ಅಲ್ಲಿಯ ಘಟನಾವಳಿಗೆ ಸಾಕ್ಷಿಯ ರೂಪದಲ್ಲಿ ಚಿತ್ರಿಸಲಾಗಿತ್ತು ...
ಸಂಜೆ 6.00 - 7.00 ಹಿಂದಿಯಲ್ಲಿ ವಿವರಣೆ .. 7.30 - 8.30 ಆಂಗ್ಲ ಭಾಷೆಯಲ್ಲಿ..
ನಿರೂಪಣೆ ಚೆನ್ನಾಗಿಯೇ ಇತ್ತು.. ಧ್ವನಿ - ಬೆಳಕಿನ ಜೊತೆ laser ಬೆಳಕು ಉಪಯೋಗಿಸಿ ಕೆಲವು ಚಿತ್ರಗಳನ್ನು ಮೂಡಿಸಿದ್ದರೆ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು ...
ಅಲ್ಲಿಂದ ಹೋಟೆಲಿಗೆ ಹಿಂತಿರುಗಿದೆವು ...

Day 3:
Chattam ದ್ವೀಪ









ಬೆಳಗ್ಗಿನ ಉಪಾಹಾರ ಸೇವಿಸಿ Chattam Saw Millಗೆ ಹೋದೆವು. Chattam ಎಂಬ ದ್ವೀಪದಲ್ಲಿರುವ ಬೃಹತ್ ಮರ ಕತ್ತರಿಸುವ ಕಾರ್ಖಾನೆ. ಈ ದ್ವೀಪದಲ್ಲಿ ಕಾರ್ಖಾನೆ ಮಾತ್ರ ಇರುವುದು. ಪೋರ್ಟ್ ಬ್ಲೇರ್ ನಿಂದ Chattam ದ್ವೀಪವನ್ನು ಸಂಪರ್ಕಿಸಲು ಒಂದು ಸೇತುವೆ ನಿರ್ಮಿಸಲಾಗಿದೆ .  ಅಲ್ಲಿಂದ ನಮ್ಮ ಪಯಣ Samudrika Naval Museumಗೆ. ನಂತರ ಮತ್ಸ್ಯಾಲಯ (fisheries aquarium). ಎರಡೂ ಕಡೆ ವಿವಿಧ ಸಾಗರ ಜೀವಿಗಳ, ಕಪ್ಪೆ ಚಿಪ್ಪುಗಳ ಸಂಗ್ರಹ ಚೆನ್ನಾಗಿತ್ತು. ಬಣ್ಣ ಬಣ್ಣದ ವಿವಿಧ ಬಗೆಯ ಚಿಪ್ಪುಗಳು.











ಆನಂತರ 'Anthropological Museum' ಗೆ - ಇಲ್ಲಿ ಅಂಡಮಾನ್ - ನಿಕೋಬಾರ್ ನ ಭೌಗೋಳಿಕ ಪರಿಸರ ಹಾಗು ಅಲ್ಲಿ ವಾಸಿಸುವ ಜನಗಳ ಜೀವನ ಶೈಲಿ ಬಗ್ಗೆ ಉತ್ತಮವಾದ  ಮಾಹಿತಿ ದೊರೆಯುತ್ತದೆ. ವಿವಧ ಆದಿವಾಸಿ ಪಂಗಡ, ಅವರ ಜೀವನ ಪದ್ಧತಿ, ಆಹಾರ ಕ್ರಮ ಮುಂತಾದವುಗಳ ಬಗ್ಗೆ ಚಿತ್ರಸಮೇತ ವಿವರಿಸಿದ್ದಾರೆ.






ಜೈಲಿನ ಕೊಠಡಿಗಳು








ಇದಾದ ನಂತರ 'cellular jail'ಗೆ ಹೋದೆವು. ಹಿಂದಿನ ದಿನ ಬರಿ 'ಧ್ವನಿ-ಬೆಳಕು' ಕಾರ್ಯಕ್ರಮ ನೋಡಿ ಹಿಂತಿರುಗಿದ್ದೆವು .. ಜೈಲನ್ನು ಪೂರ್ತಿಯಾಗಿ ನೋಡಿರಲಿಲ್ಲ .... ಅಲ್ಲೊಬ್ಬ ಗೈಡ್ ಜೈಲಿನ ಬಗ್ಗೆ ವಿವರಣೆ ನೀಡುತ್ತಿದ್ದ. ಮೊದಲಿದ್ದ 7 ವಿಭಾಗದಲ್ಲಿ ಉಳಿದಿರುವುದು 3 ಮಾತ್ರ. ಪ್ರಾಕೃತಿಕ ವಿಕೋಪದಿಂದಾಗಿ ಉಳಿದವು ಬಿದ್ದು ಹೊಗಿದೆ. ಬಿದ್ದು ಹೋದ ಕಟ್ಟಡದ ಕಲ್ಲಿನಿಂದ ಅದೇ ಜಾಗದಲ್ಲಿ ದೊಡ್ಡ ಸರಕಾರೀ ಆಸ್ಪತ್ರೆ ನಿರ್ಮಿಸಿದ್ದಾರೆ. ಅಲ್ಲಿ ಎಲ್ಲ ಸೇವೆಯೂ ಉಚಿತವಂತೆ .. ಅಂಡಮಾನಿಗೆ ದೊಡ್ಡ ಆಸ್ಪತ್ರೆ.

ಸ್ವಾತಂತ್ರ್ಯ ಜ್ಯೋತಿ




ಜೈಲು ಆವರಣದೊಳಗಿರುವ 'ಸ್ವಾತಂತ್ರ್ಯ ಜ್ಯೋತಿ' ದಿನದ ೨ ಗಂಟೆಯೂ ಉರಿಯುತ್ತಿರುತ್ತದೆ. ಇದಕ್ಕೆ ತಿಂಗಳಿಗೆ 24 LPG cylinder ಬೇಕಂತೆ. Indian Oil ನವರು ಇದನ್ನು ಉಚಿತವಾಗಿ ನೀಡುತ್ತಿದ್ದಾರೆ.
ವೀರ ಸಾವರ್ಕರರನ್ನು ಕೂಡಿಟ್ಟಿದ್ದ ಕೊಠಡಿ ನೋಡಿದೆವು. ಒಂದೇ ವೀಕ್ಷಣೆ ಗೋಪುರದಿಂದ ಎಲ್ಲ ವಿಭಾಗಗಳ ಚಲನ ವಲನಗಳನ್ನು ನೋಡಿಕೊಳ್ಳಲು ಅನುಕೂಲವಾಗುವಂತೆ ಕಟ್ಟಡವನ್ನು ವಿನ್ಯಾಸಗೊಳಿಸಿದ್ದರು..
ಜೈಲನ್ನು ನೋಡುತ್ತಿದ್ದಾಗ ಹಾಗು ಅಲ್ಲಿ ನೀಡುತ್ತಿದ್ದ ಕಠಿಣ ಶಿಕ್ಷೆಗಳ ವಿವರಣೆ ಕೇಳುತ್ತಿದ್ದಾಗ ಮೈಯಲ್ಲಿ ಏನೋ ಒಂತರ ಕಂಪನಗಳು ಆಗುತ್ತಿದ್ದವು..

ಹೋಟೆಲಿಗೆ ಹಿಂತಿರುಗಿ ಊಟ, ಸಣ್ಣ ನಿದ್ದೆ ! ಸಂಜೆ 4 ಗಂಟೆಗೆ 'science center' ಗೆ ಹೋದೆವು. ಅಂತ ವಿಶೇಷವೇನೂ ಇರಲಿಲ್ಲ ಅಲ್ಲಿ. ಅಲ್ಲಿ ಇಟ್ಟಿದ್ದ ಪ್ರಾತ್ಯಕ್ಷಿಕೆಗಳ ನಿರ್ವಹಣೆ ಕೂಡ ಸರಿ ಇರಲಿಲ್ಲ. ಅಲ್ಲಿ ಒಂದು 3D ಸಿನಿಮಾ ಕೂಡ ವೀಕ್ಷಿಸಿದೆವು .. ಅದೂ ಕೂಡ ಅಷ್ಟಕ್ಕಷ್ಟೇ..  ನಂತರ 'corbyn's cove' ಸಮುದ್ರ ದಂಡೆಯ ಮೇಲೆ ಸ್ವಲ್ಪ ಕಾಲ ವಿಹರಿಸಿದೆವು .. ಬೆಳಗ್ಗಿನ ಬಿಸಿಲಿನ ದಣಿವಿಗೆ ಸಂಜೆಯ ತಂಗಾಳಿ ಹಿತವೆನಿಸುತ್ತಿತ್ತು ... ಇಂದಿನ ದಿನ ನೋಡಿದ ಸ್ಥಳಗಳಲ್ಲಿ 'cellular jail' ಒಂದೇ ವಿಶೇಷತೆ ಇಂದ ಕೂಡಿದ್ದು .. ರಾತ್ರಿ ಜೋರಾಗಿ ಮಳೆ ಸುರಿಯಿತು ..

Day 4:
Wandoor beach
ಅಂಡಮಾನಿನಲ್ಲಿ ಬೆಳಕು ಹರಿಯುವುದು ಬೇಗ ಹಾಗು ಸಂಜೆ ಸೂರ್ಯ ಮುಳುಗುವುದು ಕೂಡ ಬೇಗನೆ..ಆದ್ದರಿಂದ ಬೆಳಗ್ಗೆ 4.30ಕ್ಕೆ ಸೂರ್ಯೋದಯ ವೀಕ್ಷಿಸಲು carbyn's cove beachಗೆ ಹೋದೆವು. ಆದರೆ ಹಿಂದಿನ ರಾತ್ರಿ ಸುರಿದ ಮಳೆಯಿಂದಾಗಿ ಆಕಾಶದ ತುಂಬಾ ಮೋಡ ಕವಿದಿತ್ತು. ೫ ಗಂಟೆಗೆ ಬೆಳಕಾಯಿತು ವಿನಃ ಸೂರ್ಯ ದರ್ಶನವಾಗಲಿಲ್ಲ .. ಮೋಡದ ಹಿಂದೆ ಅಡಗಿ ಕುಳಿತಿತ್ತು !! ೬ ಗಂಟೆವರೆಗೆ ಕಾದು ನಿರಾಶರಾಗಿ ಹಿಂತಿರುಗಿದೆವು .. ಹೋಟೆಲಿಗೆ ಹಿಂತಿರುಗಿ ಸ್ನಾನ ಉಪಹಾರ ಮುಗಿಸಿ 'wandoor beach' ಕಡೆಗೆ ಪಯಣ .. ಪೋರ್ಟ್ ಬ್ಲೇರ್ ನಿಂದ 17 km ದೂರದಲ್ಲಿ ಇದೆ. ಅಲ್ಲಿಗೆ ಸಾಗುವ ಮಾರ್ಗದಲ್ಲಿ ಮೊದಲರ್ಧ ಭಾಗ ಕರ್ನಾಟಕದ ಮಲೆನಾಡನ್ನು ನೆನಪಿಸುತ್ತದೆ. ಕಿರಿದಾದ ರಸ್ತೆ, ರಸ್ತೆಯಂಚಿನಲ್ಲಿ ದೊರದೊರಕ್ಕೆ ಅಲ್ಲೊಂದು ಇಲ್ಲೊಂದು ಮನೆ, ಅವನ್ನು ಆವರಿಸಿರುವ ಅಡಿಕೆ, ತೆಂಗು ತೋಟ. ಆದರೆ ಹವಾಮಾನ ಮಾತ್ರ ಕರಾವಳಿಯದ್ದು !! ಮತ್ತೂ ಮುಂದೆ ಸಾಗಿದಾಗ 2004ರ ಸುನಮಿಯಿಂದಾದ ಹಾನಿಯನ್ನು ವೀಕ್ಷಿಸಬಹುದು. 8 ವರ್ಷ ಕಳೆದರೂ ಒಳನಾಡಿಗೆ ನುಗ್ಗಿದ ನೀರು ಹಿಂದೆ ಸರಿದಿರಲಿಲ್ಲ, ಆವಿಯಾಗಲೂ ಇಲ್ಲ !! ಕೃಷಿ ಭೂಮಿ, ಮನೆಗಳಿದ್ದ ಪ್ರದೇಶವೆಲ್ಲ ಈಗ ನೀರಿನ ಹೊಂಡ !!

Wandoor beach
ಹಾಗೆ ಮುಂದೆ ಸಾಗಿ wandoor bech ಸೇರಿದಾಗ ಒಂದು ಸುಂದರ ರೋಮಾಂಚಕ ಅನುಭವ. ಶುಭ್ರ ತಿಳಿ ನೀಲಿ ನೀರಿನ ವಿಶಾಲ ಸಮುದ್ರ ಕಣ್ಣ ಮುಂದೆ, ಬಿಳಿ ಮರಳು ಕಾಲ ಕೆಳಗೆ.. ಜನ ಜಂಗುಳಿ ಇರಲಿಲ್ಲ .. ಆರಾಮಾಗಿ ವಿಹರಿಸಲು ಒಳ್ಳೆ ಪ್ರಶಸ್ಥ ಸ್ಥಳ. ಕಸ ಕಡ್ಡಿಗಳು ಜಾಸ್ತಿ ಇಲ್ಲದೆ ಸುಂದರವಾಗಿತ್ತು. ಆದರೂ ಕೆಲವು ಮದ್ಯದ ಬಾಟಲಿ / ಬಾಟಲಿ ಚೂರುಗಳು ಕಾಣಿಸುತ್ತಿದ್ದವು - ಅವಿವೇಕಿಗಳ ಕೆಲಸ !! ಸಮುದ್ರ ದಂಡೆಯ ಮೇಲೆ ಕಪ್ಪೆ ಚಿಪ್ಪುಗಳನ್ನು ಆರಿಸುತ್ತ ಬಹಳ ದೂರ ನಡೆದು ಹಿಂತಿರುಗಿದೆವು.. ವಿವಿಧ ಆಕಾರದ ಹಲವು ಬಣ್ಣದ ಚಿಪ್ಪುಗಳು ದೊರೆತವು ... ಕೆಲವು ಫೋಟೋ ಸೆರೆಹಿಡಿದು ಸ್ವಲ್ಪ ಹೊತ್ತು ನೀರಿನಲ್ಲಿ ಮಿಂದೆದ್ದೆವು. ಸ್ನಾನ ಮಾಡಿ ಬಟ್ಟೆ ಬದಲಾಯಿಸಲು ಸ್ನಾನಗೃಹಗಳಿವೆ - 10/- ಶುಲ್ಕ ..

3 ಗಂಟೆ  ಹೊತ್ತಿಗೆ ಹೋಟೆಲಿಗೆ ಹಿಂತಿರುಗಿ ಊಟ ನಿದ್ದೆ.. ಊಟಕ್ಕೆ 'shahi tukda' ಸಿಹಿ ತಿಂಡಿ ಮಾಡಿದ್ದರು - breadನ್ನು ಸಕ್ಕರೆ ಪಾಕದಲ್ಲಿ ಮುಳುಗಿಸಿ, ಮೇಲೊಂದಿಷ್ಟು ಗೋಡಂಬಿ ದ್ರಾಕ್ಷಿ ಹಾಗು ಗಟ್ಟಿ ಹಾಲು/ಕೆನೆ ಹಾಕ್ಕಿದ್ದು !!

ಸಂಜೆ ಕಾಫಿಯ ನಂತರ shopping complex ಕಡೆ ಹೊರಟೆವು. Sagarika Emporium - ಸರಕಾರದಿಂದ ಮಾನ್ಯತೆ ಪಡೆದಿರುವ ಎರಡು ಅಂಗಡಿಗಳು. ಚಿಪ್ಪಿನಿಂದ ತಯಾರಿಸಿದ ವಿವಿಧ ವಸ್ತುಗಳು ಮಾರಾಟಕ್ಕಿದ್ದವು. ವಿವಿಧ ಗಾತ್ರದ ಶಂಖಗಳು ದೊರೆಯುತ್ತಿದ್ದವು. ಬಿದಿರು ಹಾಗು ಮರದ ವಸ್ತುಗಳು ಕೂಡ ಇದ್ದವು. ಪಕ್ಕದಲ್ಲಿ Shiva-Sagar emporium - ಖಾಸಗಿ ಯವರು ನಡೆಸುವದ್ದು. ಇಲ್ಲಿ ಕೂಡ ಅದೇ ವಸ್ತುಗಳು. 5 - 6 ಅಂಗಡಿ ಸುತ್ತಿ ಕೊನೆಗೆ ಕೊಂಡದ್ದು ಎರಡೇ - ಒಂದು ಚಿಪ್ಪಿನಿಂದ ತಯಾರಿಸಿದ ಕಿವಿಯೋಲೆ; ಇನ್ನೊಂದು ಆದಿವಾಸಿ ಪ್ರತಿಕೃತಿ.


ಅಂದು (26/2) ವೀರ ಸಾವರ್ಕರ್ ಪುಣ್ಯ ತಿಥಿ ಯಾದ್ದರಿಂದ ಮರಾಠಿ ಪ್ರವಾಸಿಗರು ಬಹಳ ಸಂಖ್ಯೆಯಲ್ಲಿ ಇದ್ದರು.

ಹೋಟೆಲಿಗೆ ಹಿಂತಿರುಗಿ ರಾತ್ರಿ ಊಟ ನಿದ್ದೆ ..

Day 5:

ಇಂದಿನ ನಮ್ಮ ಪಯಣ  'Havelock Island' ಕಡೆಗೆ. ಬೆಳಗ್ಗೆ ಬೇಗನೆ ಉಪಹಾರ ಮುಗಿಸಿ 7.30ಕ್ಕೆ ಬಂದರು ಸೇರಿದೆವು. ಅಲ್ಲಿಂದ Makruzz Catamaranನಲ್ಲಿ Havelock Islandಗೆ ಪಯಣ. ಬಂದರು ಒಳಗೆ ಪ್ರವೇಶಿಸಲು ಹಾಗು ಹಡಗು ಏರಲು ಟಿಕೆಟ್ ಜೊತೆ ಒರಿಜಿನಲ್ government ID proof ಬೇಕು .. check in ಮಾಡಿಸಿ ಕೆಲವು ಫೋಟೋ ತೆಗೆದು ಹಡಗು ಏರಿ ಕುಳಿತೆವು. ಪೋರ್ಟ್ ಬ್ಲೇರ್ ನಿಂದ havelockಗೆ 55km. ಪ್ರಯಾಣ ಅವಧಿ 1.5ಗಂಟೆ .. ಅದೇ ಸರ್ಕಾರೀ ಹಡಗಿನಲ್ಲಿ 3 ತಾಸು ಬೇಕಂತೆ !!Makruzzನಲ್ಲಿ ಒಂದು ಬದಿಯ ಪ್ರಯಾಣಕ್ಕೆ ಒಬ್ಬರಿಗೆ 815/-.


Radhanagar beach





10.30ಕ್ಕೆ havelockನಲ್ಲಿಳಿದೆವು. ಅಲ್ಲಿ ಅಜೀಜ್ ಎನ್ನುವವರು ಗಾಡಿ ವ್ಯವಸ್ಥೆ ಮಾಡಿಕೊಟ್ಟರು -  "ರಾಧಾನಗರ" beachಗೆ. 'ರಾಧಾನಗರ' ಬಿಳಿ ಮರಳಿನ ನೀಲಿ ನೀರಿನ ಸುಂದರವಾದ ಉದ್ದನೆಯ ಬೀಚ್ . ಅಂಡಮಾನಿನ ಅತೀ ಉದ್ದನೆಯ ಹಾಗು ಸ್ವಚ್ಛವಾದ ತೀರ. ಸಮುದ್ರ ದಂಡೆಯಲ್ಲಿ ಕಸ ಕಡ್ಡಿ ಕಾಣಲೇ ಇಲ್ಲ. ಕಪ್ಪೆ ಚಿಪ್ಪು ಕೂಡ ಇರಲಿಲ್ಲ. ಇಲ್ಲಿಗೆ ವಿದೇಶಿಗರು ಜಾಸ್ತಿ ಬರುವುದರಿಂದ ಸ್ವಚ್ಛತ ಕಾರ್ಯ ಜಾಸ್ತಿ ಅಂತೆ. ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದವು. ನೀರಿಗಿಳಿಯಲಿಲ್ಲ. ಬರೀ ಕೆಲವು ಫೋಟೋ ತೆಗೆದೆವಷ್ಟೇ..




ಅಂಡಮಾನಿನ ಎಳನೀರು ಸವಿದೆವು... ಬಹಳ ಗಾತ್ರದವು !! ಇದೆ ಮೊದಲ ಸಲ ಒಂದು ಎಳನೀರನ್ನು ಪೂರ್ತಿ ಕುಡಿಯಲಾಗದೆ  ಬಿಟ್ಟದ್ದು - ೩ ಜನರಿಗೆ ಸಾಕಾಗುವಷ್ಟು ನೀರಿತ್ತು !!!

ಮದ್ಯಾಹ್ನ ಅಲ್ಲೇ ಒಂದು ಹೋಟೆಲಿನಲ್ಲಿ ಊಟ - ಚಪಾತಿ ಬಹಳ ಮೆತ್ತಗೆ ಇತ್ತು ..

ಸಂಜೆ 4 ಗಂಟೆಗೆ ಪುನಃ Makruzzನಲ್ಲಿ ಹಿಂತಿರುಗಿ ಬಂದೆವು. ಹೋಟೆಲು ಸೇರಿ ವಿಶ್ರಾಂತಿ.  ಊಟದ ನಂತರ ಒಂದು ಸಣ್ಣ walk. ಸುಮಾರು 3 km ನಡೆದಿರಬಹುದು. ದಾರಿಯಲ್ಲಿ ಇದ್ದ ಮಾರಿಯಮ್ಮ ದೇವಸ್ಥಾನ ಹೋಗಿ ಬಂದೆವು.




Day 6:

North Bay - Rs. 20 ನೋಟಿನ ಹಿಂಬಾಗದಲ್ಲಿರುವ ಚಿತ್ರ
ಬೆಳಗ್ಗಿನ ಉಪಹಾರ ಸೇವಿಸಿ 3 Island Tour ಗೆ ಅಣಿಯಾದೆವು. 3 Island tour ಅಂದರೆ - North Bay, Ross Island, Viper Island ದ್ವೀಪಗಳಿಗೆ ದೋಣಿಯಲ್ಲಿ ಪಯಣ. ಒಬ್ಬರಿಗೆ 500/- . ಊಟ ಸೇರಿ. ಮರೀನಾ ಪಾರ್ಕ್ Jetty ಇಂದ - ಇದಕ್ಕೆ Aberdeen Jetty ಅಂತ ಕರೆಯುತ್ತಾರೆ- 'Silver Jet' ಎನ್ನುವ ದೊಡ್ಡ ದೋಣಿಯಲ್ಲಿ ಹೊರಟೆವು.

ಮೊದಲಿಗೆ North Bay. ಇಲ್ಲಿ Scuba Diving, Snorkeling, Jet Ski, Banana Ride, Sofa Ride, Speed boat, Sea walking - ಹೀಗೆ ವಿವಿಧ water sportsಗೆ ಅವಕಾಶ ಕಲ್ಪಿಸಿದ್ದಾರೆ. North Bay ಸುತ್ತ Coral Reef ಜಾಸ್ತಿ ಇದೆ. ನಾವು Scuba Diving ಮಾಡಲು ನಿಶ್ಚಯಿಸಿದೆವು. ತಲ 4000/- ದರ !! Silver Jet ದೋಣಿಯನ್ನು ದಡದಿಂದ ಸುಮಾರು ದೂರದಲ್ಲಿ ಆಳ ನೀರಿನಲ್ಲಿ ನಿಲ್ಲಿಸಿದ್ದರು. ಕಾರಣ - coral reef ಇರುವುದರಿಂದ ಯಾವುದೇ ಬಂದರು/jetty ನಿರ್ಮಿಸಿರಲಿಲ್ಲ. ಜೀವರಾಶಿಗಳಿಗೆ ಹಾನಿಯಾಗುತ್ತದೆ ಎಂದು. ದೋಣಿ ನಿಲ್ಲಿಸಿದ ಸ್ಥಳದಿಂದ ಸಮುದ್ರ ದಂಡೆಗೆ ಇನ್ನೊಂದು ಸಣ್ಣ ದೋಣಿಯಲ್ಲಿ - ದೋಣಿಯ ಕೆಳ ಭಾಗ glassನಿಂದ ಮಾಡಿದ್ದು - coral reef ನೋಡಲು ಅನುಕೂಲ ಆಗಲಿ ಎಂದು. ಆದರೆ ಏನೂ ಸರಿಯಾಗಿ ತೋರುತ್ತಿರಲಿಲ್ಲ !!

ದಡ ಸೇರಿದ ನಂತರ ಬಟ್ಟೆ ಬದಲಾಯಿಸಿ, scuba diving ಉಡುಗೆ ತೊಟ್ಟು 10 ನಿಮಿಷಗಳ ತರಬೇತಿ ನಂತರ ಆಳಕ್ಕೆ ಇಳಿದೆವು. ನಮ್ಮ ಜೊತೆ ಇಬ್ಬರು ಗೈಡ್ ಇದ್ದರು. ಆಳಕ್ಕೆ ಇಳಿಯುತ್ತಿದ್ದ ಹಾಗೆ ಕಿವಿಯ ಮೇಲೆ ಒತ್ತಡ ಜಾಸ್ತಿ ಆಯಿತು!! ಆದರೆ ಸಮುದ್ರದೊಳಗಿನ ಬಣ್ಣ ಬಣ್ಣದ ಪ್ರಪಂಚ ನೋಡಿದ ಕೂಡಲೇ ಭಯ ನೋವು ಎಲ್ಲ ಮಾಯ !!! ಎಷ್ಟೊಂದು colourful ಪ್ರಪಂಚ - ವಿವಿಧ ನಮೂನೆಯ ಹಲವಾರು ಬಣ್ಣದ ಜೀವರಾಶಿಗಳು. ಬಹಳ ಹತ್ತಿರದಿಂದ ಇವುಗಳನ್ನು ನೋಡುವ ಅವಕಾಶ. ಮೀನಿನ ರಾಶಿಯೊಳಗೆ ಕೈ ಇತ್ತಂತೆ ಅನಿಸುತ್ತಿತ್ತು. ಅಲ್ಲಿಯ ತನಕ ಬರಿ discovery channel/national geographic ದಲ್ಲಿ ನೋಡುತ್ತಿದ್ದದ್ದನ್ನು ಕಣ್ಣಾರೆ ಕಂಡ ಅನುಭವ - ಬಹಳ ರೋಮಾಂಚನ ಗೊಳಿಸಿತ್ತು. ಅದೊಂದು ಸುಂದರ ಮರೆಯಲಾಗದ ಅನುಭವ. 10 ಮೀಟರ್ ಅಳದವರಗೆ ಕರೆದುಕೊಂಡು ಹೋದರು. ವೀಡಿಯೊ ಹಾಗು ಫೋಟೋ ಚಿತ್ರಿಸಿ ಒಂದು cdಯಲ್ಲಿ ಕೊಡುತ್ತಾರೆ. ಒಟ್ಟಿನಲ್ಲಿ ಒಂದು ಸುಂದರ ಅನುಭವ.

ಬೇರೆ ಯಾವ water activities ಮಾಡಲಿಲ್ಲ. ಸಮಯದ ಅಭಾವದಿಂದ. Scuba diving ಮಾಡಿ ಮುಗಿಸುವಷ್ಟರಲ್ಲಿ 'Silver Jet' ದೋಣಿ ನಮ್ಮನ್ನು ಇನ್ನೊಂದು ದ್ವೀಪಕ್ಕೆ ಕರೆದೊಯ್ಯಲು ಅಣಿಯಾಗಿತ್ತು. ದೋಣಿಯಾತ ಕೂಗಿ ಕರೆಯುತ್ತಿದ್ದ.

portable churmuri ಅಂಗಡಿ
ಅಲ್ಲಿಂದ 12.15ಕ್ಕೆ ಹೊರಟೆವು. ROSS Islandಕಡೆಗೆ. 'Silver Jet' ದೋಣಿಯಲ್ಲೇ ಊಟದ ವ್ಯವಸ್ಥೆ. ಫ್ರೈಡ್ ರೈಸ್ ಹಾಗು ನೀರಿನ ಪೊಟ್ಟಣ. 1 ಗಂಟೆಗೆ Ross Island ಸೇರಿದೆವು. ಇದು ಬ್ರಿಟಿಷರಿದ್ದಾಗ ಆಂಗ್ಲರ ರಾಜಧಾನಿಯಾಗಿತ್ತು. 2ನೇ ಮಹಾಯುದ್ಧದಲ್ಲಿ ಜಪಾನ್ ನಿಂದ ದಾಳಿಗೊಳಪಟ್ಟು ಹಾನಿಯಾಗಿದೆ. ಈಗ ಇಲ್ಲ ಮನುಷ್ಯರ ವಾಸ ಇಲ್ಲ. Indian Navyಯವರ ಉಸ್ತುವಾರಿಯಲ್ಲಿದೆ. ಬಹಳ ಸ್ವಚ್ಚವಾಗಿಟ್ಟಿದ್ದಾರೆ. ಜಿಂಕೆ ಹಾಗು ನವಿಲುಗಳು ಬಹಳ ಇದಾವೆ. ಅವುಗಳಿಗೆ ಕುಡಿಯಲು ನೀರಿಗೆ ಒಂದು ಕೆರೆ ಇದೆ. ಈ ದ್ವೀಪದ ಹೆಸರು Daniel Rossನಿಂದಾಗಿ ಬಂದಿದೆಯಂತೆ.




2ಗಂಟೆಗೆ ಇಲ್ಲಿಂದ ಹೊರತು Viper Island ಕಡೆ ಹೊರಟೆವು. Viper Island 'Cellular Jail' ಕಟ್ಟುವ ಮೊದಲು ಸೆರೆಮನೆಯಾಗಿ ಬಳಕೆಯಲ್ಲಿ ಇತ್ತಂತೆ. Open Jail - ಒಂದು ಸಣ್ಣ ದ್ವೀಪ ಸುತ್ತಲೂ ಆಳ ಸಮುದ್ರ. ಅದೂ ಮೊಸೆಗಳು ಇರುವಂತ ಜಾಗ. ಸಾಲದಕ್ಕೆ 'viper' ಹಾವುಗಳು ಇದ್ದಂತಹ ಪ್ರದೇಶ - ಇಗಲೂ ಇದೆಯಂತೆ ಆದರೆ ಕಡಿಮೆಯಾಗಿದೆ. ಬಯಾನಕ ನರಕ !! ಇಲ್ಲಿ ಈಗ ಏನೂ ಉಳಿದಿಲ್ಲ. ಎರಡು ಪಾಳು ಬಿದ್ದ  ಕಟ್ಟಡ  - ಒಂದು court room, ಇನ್ನೊಂದು ನೇಣು ಗಂಬ. ಸುನಾಮಿಯಿಂದಾಗಿ ಬಹಳ ಕಸ ಕಡ್ಡಿಗಳು ತುಂಬಿದೆ. ಅನಂತರ ಸರಿಯಾದ ನಿರ್ವಹಣೆ ಮಾಡಿಲ್ಲದ ಕಾರಣ ಸ್ಥಳ ಮಹತ್ವ ಕಳೆದುಕೊಂಡಿದೆ. ದ್ವೀಪದಲ್ಲಿ ಒಂದು ಶೌಚಾಲಯ ಕೂಡ ಇಲ್ಲ.

ಕುಲ್ಫಿ ಬೇಕಾ ??
3.30ಕ್ಕೆ ಅಲ್ಲಿಂದ Marina Park Jetty ಕಡೆ ಪಯನ. 4.30ಕ್ಕೆ ಬಂದು ಸೆರಿದೆವು. ಅಲ್ಲಿಗೆ 3 ದ್ವೀಪ ಪ್ರವಾಸ ಮುಗಿತು. ಬಹಳ ಇಷ್ಟವಾದದ್ದು 'ಸ್ಕೂಬಾ ಡೈವಿಂಗ್' !!

ಮರೀನಾ ಪಾರ್ಕನಲ್ಲಿ ಒಂದು ಚುರುಮುರಿ ಪೊಟ್ಟಣ ಕೊಂಡು ತಿಂದೆವು. ಅಷ್ಟೊತ್ತಿಗೆ ರಶೀದ್ ಬಂದು ಹೋಟೆಲಿಗೆ ಕರೆದೊಯ್ದರು. Palm grove eco resort ನಿಂದ ನಮ್ಮ ವಾಸ ಲಿಂಕ್ ರೋಡ್ ನಲ್ಲಿರುವ 'hotel Abhishekk' ಗೆ ಶಿಫ್ಟ್. Palm grove eco resort ನಲ್ಲಿ ಇವತ್ತಿನಿಂದ ಬೇರೆಯವರಿಗೆ ಕೊಠಡಿ ಬುಕ್ ಆಗಿತ್ತು.







Palm grove eco resortನಲ್ಲಿನ ಅಡಿಗೆ ಬಹಳ ರುಚಿಯಗಿ ಚೆನ್ನಾಗಿತ್ತು. ಮಾವಿನ ಉಪ್ಪಿನಕಾಯಿ ತಿಂದದ್ದೇ ತಿಂದದ್ದು! ರೋಟಿ ಬಹಳ ಮೆದುವಾಗಿತ್ತು. ಪ್ರತಿದಿನದ ಊಟಕ್ಕೆ ಒಂದು ಸಿಹಿ ತಿಂಡಿ ಮಾಡುತ್ತಿದ್ದರು. ಅಕ್ಕಿ ಪಾಯಸ ಬಹಳ ರುಚಿಕರವಾಗಿತ್ತು. ರಾಮ್, ನವಾಜ್, ಪಂಚನನ್ - ಮೂವರು ಬಂಗಾಳಿ ಅಡಿಗೆಯವರು.


ಈ ಹೊಸ ಹೋಟೆಲ್ ಇರುವುದು ಸಿಟಿ ಮಧ್ಯದಲ್ಲಿ; ಜಂಗ್ಲಿಘಾಟ್ ಏರಿಯಾದಲ್ಲಿ. ಸಂಜೆ ಕೊಠಡಿ ಸೇರಿ, ಸ್ನಾನ ಮುಗಿಸಿ, ಒಂದು ಕಾಫಿ ಹೀರಿ ವಾಕ್ ಹೊರಟೆವು. ಸುತ್ತಮುತ್ತಲಿನ ರಸ್ತೆಯಲ್ಲಿ ಹಾಗೆ ಸ್ವಲ್ಪ ದೂರ ನಡೆದು ಹಿಂತಿರುಗಿದೆವು.


ದಾರಿಯಲ್ಲಿ ಕಂಡದ್ದೇ ಈ AFC...... KFCಗೆ ಅಂಡಮಾನಿನ ಪರ್ಯಾಯ !!









Day 7:
ಬೆಳಗ್ಗೆ ಉಪಹಾರ ಸೇವಿಸಿ ಹೊರಟು ಕುಳಿತೆವು. ಮೊಯಿದೀನ್ ಬಂದು ನಮ್ಮನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದರು. ಮದ್ಯಾಹ್ನ 12ರ ಫ್ಲೈಟ್ ಚೆನ್ನೈಗೆ.  ಸಂಜೆ 5ಕ್ಕೆ ಚೆನ್ನೈ ನಿಂದ ಬೆಂಗಳೂರಿಗೆ ಶತಾಬ್ಧಿ. ಈ ಬಾರಿಯ ಊಟ ಅಷ್ಟೊಂದು ಚೆನ್ನಾಗಿ ಇರಲಿಲ್ಲ ಹಾಗು ಶೌಚಾಲಯವನ್ನು ಕೂಡ ಶುಚಿಗೊಳಿಸಿರಲಿಲ್ಲ.  ರಾತ್ರಿ 10ಕ್ಕೆ ಬೆಂಗಳೂರು ತಲುಪಿ 11ಕ್ಕೆ ಮನೆ ಸೆರಿದೆವು.


ಸುನಾಮಿ ಯಲ್ಲಿ ಮಡಿದವರ ನೆನಪಿಗಾಗಿ

ಒಂದು ವಾರದ ಅಂಡಮಾನ್ ಪ್ರವಾಸಕ್ಕೆ ತೆರೆ ಬಿದ್ದಿತು. ಆದಿವಾಸಿಗಳ ನಾಡು ಎಂದು ಕರೆಯುವ ಅಂಡಮಾನಿನಲ್ಲಿ ಆದಿವಾಸಿಗಳನ್ನು ದುರ್ಬೀನು ಹಾಕಿ ಹುಡುಕಬೇಕು. ಬೆರಳೆಣಿಕೆಯಷ್ಟಿರುವ ಅವರು ಕೆಲವೇ ದ್ವೀಪಗಳಿಗೆ ಸೀಮಿತರು. 6ಲಕ್ಷಕ್ಕೂ ಮೀರಿದ ಜನಸಂಖ್ಯೆಯಲ್ಲಿ ಬಂಗಾಳಿಗರು ಬಹುಸಂಖ್ಯಾತರು. ನಂತರದ ಸ್ಥಾನದಲ್ಲಿ ತಮಿಳರು. ಆಡು ಭಾಷೆ ಹಿಂದಿ. ಇತ್ತೇಚೆಗೆ ಉಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಆದಿವಾಸಿಗಳ ತಾಣಗಳಿಗೆ ಇತರೆ ಜನರಿಗೆ ಪ್ರವೇಶ ನಿಷೇದಿಸಿ ಆಜ್ಞೆ ಹೊರಡಿಸಿದೆ. ಇದು ಒಳ್ಳೆಯ ಬೆಳವಣಿಗೆ. Tribal Tour ಹೆಸರಿನಲ್ಲಿ ನಡೆಯುತ್ತಿದ್ದ ಆದಿವಾಸಿ ಶೋಷಣೆಗೆ ಒಂದು ವಿರಾಮ ಬೀಳಲಿ.


Monday 1 April, 2013

ಅರ್ಥಪೂರ್ಣ ಉಡುಗೊರೆ

ಕೆಳಗಿನವು ನನ್ನ ಮದುವೆಗೆ ಸಂಸ್ಕಾರ ಭಾರತಿ/ರಾಷ್ಟ್ರೋತ್ಥಾನ ಪರಿಷತ್ತಿನ ಹಿರಿಯರು ನೀಡಿದ ಶುಭಾಶಯ/ಉಡುಗೊರೆ. ಸಂಧರ್ಭಕ್ಕೆ ತಕ್ಕುದಾದ ಅರ್ಥಪೂರ್ಣ ಉಡುಗೊರೆ ... 





"ವಧುವಿಗೆ ಕಿವಿಮಾತು"... ಶೀರ್ಷಿಕೆ "ವಧು" ಎಂದಿದ್ದರೂ ಗಂಡ-ಹೆಂಡತಿ ಇಬ್ಬರು ಜೊತೆಯಾಗಿ ಓದಬೇಕಾದ ಕೃತಿ.

"ಮನೆಯೇ ಮಾಂಗಲ್ಯ"... 'ಮಾಂಗಲ್ಯ' ಎಂಬ ಪದದ ಅರ್ಥ ಮಂಗಲಕರವಾದದ್ದು, ಶುಭಪ್ರದವಾದದ್ದು .. ಹೀಗೆ ಮನೆಯು ನಿತ್ಯಮಂಗಲಕರವಾಗಿರಲು ಆಚಾರಸಂಹಿತೆಯನ್ನು ನಿರೂಪಿಸಿರುವ ಕೃತಿ ಇದು.

"ಭಕ್ತಿ ಸುಧಾ".. ೪೦೦ + ಶ್ಲೋಕ/ಭಜನೆಗಳ ಸಂಗ್ರಹ..  

"ಸನಾತನ ಭಾರತ" ... ಸ್ವಾಮಿ ವಿವೇಕಾನಂದರ ಉಪನ್ಯಾಸ ಸಂಗ್ರಹ.. 

"ರಾಷ್ಟ್ರ ನಿರ್ಮಾಣ" ... ಸ್ವಾಮಿ ವಿವೇಕಾನಂದರ ವಿಚಾರಧಾರೆಯ ಸಂಗ್ರಹ..