Tuesday 15 November, 2011

ಪುಸ್ತಕ ಪರಿಚಯ - "ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್"

(google images)


ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಅಂಡಮಾನ್ ಪ್ರವಾಸದ ಅನುಭವವನ್ನು ರಸವತ್ತಾಗಿ ವಿವರಿಸುವ ಜೊತೆಗೆ ಅಲ್ಲಿನ ಜೀವ ವೈವಿಧ್ಯದ ಪರಿಚಯವನ್ನು ನೀಡಿದ್ದಾರೆ. ಬರೀ ಮೋಜಿನ ಪ್ರವಾಸ ಮಾಡದೆ, ಅಲ್ಲಿನ ಪರಿಸರ, ಜೀವ ವೈವಿಧ್ಯ ಹಾಗು ಸಂಸ್ಕೃತಿಯ  ಸೂಕ್ಷ್ಮತೆ ಅರಿಯಲು ಪ್ರಯತ್ನಿಸಿದ್ದಾರೆ.

ಪುಸ್ತಕದ ಎರಡನೆ ಭಾಗ ಜಗತ್ತಿನ ಉದ್ದನೆಯ ನದಿ "ನೈಲ್" ಬಗ್ಗೆ, ಅದರ ಉಗಮ ಸ್ಥಾನದ ಅನ್ವೇಷಣೆಯ ಬಗ್ಗೆ ಪರಿಚಯಿಸುತ್ತದೆ. ಅದರ ಉಗಮ ಸ್ಥಾನ ತಿಳಿಯಲು ಅನೇಕರು ಪಟ್ಟ ಪಾಡನ್ನು, ಮಾಡಿದ ಸಾಹಸವನ್ನು ಚೆನ್ನಾಗಿ ವಿವರಿಸಿದ್ದಾರೆ.

ಲೇಖಕರು - ಪೂರ್ಣಚಂದ್ರ ತೇಜಸ್ವಿ
ವಿತರಕು - ಪುಸ್ತಕ ಪ್ರಕಾಶನ

Tuesday 1 November, 2011

ಚೀಂವ್ ಚೀಂವ್ ನಿನಾದ!!

"ಚೀಂವ್ ಚೀಂವ್" - ನಿರುಪದ್ರವಿ, ಪುಟಾಣಿ ಗುಬ್ಬಚ್ಚಿಯ ಕೂಗು!!

ಈ ಶಬ್ದ ಕಿವಿಗೆ ಬೀಳದೆ ಅದೆಷ್ಟು ವರ್ಷಗಳಾಗಿತ್ತೋ? ಕಾರ್ಕಳವೆಂಬ ಸಣ್ಣ ಊರನ್ನು ಬಿಟ್ಟು ಬೆಂಗಳೂರು ಮಹಾನಗರಿಗೆ ಬಂದದ್ದು ೨೦೦೦ನೇ ಇಸವಿಯಲ್ಲಿ. ಆಗ ನಾವಿದ್ದ ಶ್ರೀನಗರದಲ್ಲಿ ಎಲ್ಲೊ ಒಂದೊಂದು ಸಲ ಇವು ಕಾಣಸಿಗುತ್ತಿದ್ದವು. ನಂತರದ ಕೆಲವೇ ದಿನಗಳಲ್ಲಿ ಸುಳಿವೇ ಇಲ್ಲದಂತೆ ಮಾಯವಾದವು!

ಈಗ ವರ್ಷದ ಕೆಳಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋದಾಗ ಇವು ಮತ್ತೆ ಕಣ್ಣಿಗೆ ಬಿದ್ದವು. ಪಕ್ಕದಲ್ಲಿರುವ ಉಪಹಾರಗೃಹದ ಮೇಜಿನ ಬಳಿ ಬಿದ್ದಿದ್ದಂತಹ ಚೂರು-ಪಾರು ತಿಂಡಿಗೆ ಗುಂಪು ಗುಂಪಾಗಿ ಬರುತ್ತಿದ್ದವು. ಕಾಂಕ್ರೀಟ್ ಕಾಡಿನಿಂದ ಸ್ವಲ್ಪ ದೂರವಿರುವ ಕಾರಣ ಗುಬ್ಬಿಗಳು ಇನ್ನು ಅಲ್ಲಿ ಉಳಿದುಕೊಂಡಿವೆ!!

ಈ ವರ್ಷದ ಬೇಸಿಗೆಯಲ್ಲಿ ನಮ್ಮ ಕುಟುಂಬ ಬೆಂಗಳೂರಿನ ಶ್ರೀನಗರದಿಂದ ಕೆಂಗೇರಿ ಉಪನಗರದ ಬಳಿ ಇರುವ ವಿಶ್ವೇಶ್ವರಯ್ಯ ಬಡಾವಣೆಗೆ ಮನೆ ಬದಲಾಯಿಸಿದೆವು. ಆಗ ಪುನಃ ಕಂಡದ್ದು-ಕೇಳಿದ್ದು, ಗುಬ್ಬಿಗಳು ಹಾಗು ಅದರ "ಚೀಂವ್ ಚೀಂವ್"!! ಇದು ಹೊಸ ಬಡಾವಣೆಯಾದ್ದರಿಂದ ಮನೆಗಳು ಸ್ವಲ್ಪ ಕಡಿಮೆ. ಸುತ್ತಮುತ್ತ ಕೆಲವು ತರಕಾರಿ ತೋಟಗಳು ಹಾಗು ಹಣ್ಣು-ಹುಳಗಳಿರುವ ಪೊದೆಗಳು ಸಾಕಷ್ಟಿವೆ.

ನಶಿಸುತ್ತಿರುವ ಇವುಗಳ ರಕ್ಷಣೆಗೆ ನನ್ನಿಂದಾಗುವ ಅಲ್ಪ ಸಹಾಯ ಮಾಡಲು ಯೋಚಿಸಿದೆ. ಮನೆಯ ಆವರಣದ ಗೋಡೆಯ ಮೇಲೆ ಹಾಗು ಅಂಗಳದಲ್ಲಿ ಅಕ್ಕಿ ಕಾಳುಗಳನ್ನು ಇಡಲು ಪ್ರಾರಂಭಿಸಿದೆ. ತುಂಬಾ ಸೂಕ್ಷ್ಮ ಹಾಗು ಜಾಗರೂಕ ಜೀವಿಯಾದ ಇವುಗಳು, ಪ್ರಾಯಶಃ ಮನುಷ್ಯ ಭಯ ಅಥವಾ ಇನ್ನಾವುದೋ ಕಾರಣದಿಂದ ಮೊದಲ ಒಂದು ತಿಂಗಳು ಮನೆಯ ಆವರಣದ ಒಳಗೆ ಒಂದೂ ಸುಳಿಯಲಿಲ್ಲ. ನಂತರದ ದಿನಗಳಲ್ಲಿ ೨-೩ ಗುಬ್ಬಿಗಳು ಕಾಳನ್ನು ತಿನ್ನುವ ಧೈರ್ಯತೋರಿದವು. ಇದರಿಂದ ಉತ್ತೇಜಿತನಾಗಿ ಇನ್ನೂ ಹೆಚ್ಚು ಕಾಳುಗಳನ್ನು ಇಡಲು ಶುರುವಿಟ್ಟೆ. ಈಗೀಗ ೧೦-೧೫ ಗುಬ್ಬಿಗಳ ದೊಡ್ಡ ಗುಂಪು ಕಾಳನ್ನು ತಿನ್ನಲು ಬರುತ್ತಿವೆ. ಹಾಕಿದ ಕಾಳುಗಳನ್ನು ಒಂದೂ ಬಿಡದೆ ಸ್ವಾಹ ಮಾಡುತ್ತಿವೆ! ಬೆಳಗ್ಗಿನಿಂದ ಸಂಜೆಯವರಗೂ ಅಗ್ಗಾಗ್ಗ "ಚೀಂವ್ ಚೀಂವ್" ನಾದ ಕಿವಿಗೆ ಬೀಳುತ್ತಿರುತ್ತದೆ. ಮನೆಮಂದಿಗೆಲ್ಲ ಇದರಿಂದ ಸಖತ್ ಖುಷಿ. ಈಗ ಅಕ್ಕಿ ಕಾಳಿನ ಜೊತೆ ತಟ್ಟೆಯಲ್ಲಿ ನೀರು ಸಹ ಇಡುತ್ತಿದ್ದೇನೆ. ಸಂಜೆ ಕಚೇರಿಯಿಂದ ಹಿಂತಿರುಗಿದ ನಂತರ ಕಾಳುಗಳನ್ನು ಹಾಕುವುದು ನನ್ನ ದಿನಚರಿಯ ಒಂದು ಭಾಗವಾಗಿದೆ!

ನನ್ನ ಗಮನಕ್ಕೆ ಬಂದ ಒಂದು ವಿಷಯ. ೩ ರೀತಿಯ ಅಕ್ಕಿ ಕಾಳುಗಳನ್ನು ಹಾಕಿದ್ದೆ - ಅನ್ನಕ್ಕೆ ಬಳಸುವ ಸೋನಾಮಸೂರಿ, ಗಂಜಿಗೆ ಬಳಸುವ ಕೊಚ್ಚಿಲಕ್ಕಿ (ಕೆಂಪು ಅಕ್ಕಿ) ಹಾಗು ದೋಸೆಗೆ ಬಳಸುವ ಅಕ್ಕಿ. ಇವುಗಳಲ್ಲಿ ದೋಸೆಗೆ ಬಳಸುವ ಅಕ್ಕಿಯನ್ನು ಬೇಗನೆ ತಿಂದು ಮುಗಿಸುತ್ತವೆ. ಬಹುಶಃ ಈ ಮೂರರಲ್ಲಿ ದೋಸೆ ಅಕ್ಕಿ ಮೆದುವಿರುವ ಕಾರಣವೇನೂ!!

ಇವುಗಳ ಒಂದು ಫೋಟೋ ತೆಗೆಯಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೆ. ಕ್ಯಾಮೆರಾ ಹಿಡಿದು ನಾ ಹೊರ ಬಂದರೆ ಸಾಕು, ಪುರ್ರನೆ ರೆಕ್ಕೆ ಬಡಿದು ಹಾರಿ ಬಿಡುತ್ತಿದ್ದವು. ಅಂತೂ ಇಂತೂ ಮರೆಯಲ್ಲಿ ಕಾದು ನಿಂತು ಕ್ಲಿಕ್ಕಿಸಿದ ಒಂದೆರಡು ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ.





೨೦೧೦ರಲ್ಲಿ ಭಾರತೀಯ ಅಂಚೆ ಇಲಾಖೆ ಹೊರತಂದ "ಪಾರಿವಾಳ ಹಾಗು ಗುಬ್ಬಚ್ಚಿ" ಅಂಚೆಚೀಟಿ.



ಓದುಗರಲ್ಲಿ ಒಂದು ವಿನಂತಿ - ಬೆಂಗಳೂರಿನಂತಹ ಮಹಾನಗರದಲ್ಲಿ ಇಂದು ಪಕ್ಷಿಗಳು ಕಡಿಮೆಯಾಗಲು ಮುಖ್ಯ ಕಾರಣ ಅವುಗಳಿಗೆ ಸರಿಯಾದ ಆಹಾರ ದೊರಕದೆ ಇರುವುದು ಹಾಗು ಅವುಗಳ ವಾಸಸ್ಥಾನವಾದ ಗಿಡ-ಮರಗಳ ಮಾರಣಹೋಮ. ನಿಮ್ಮ ಮನೆಯ ಸುತ್ತ ಯಾವುದೇ ಪಕ್ಷಿಗಳು ಕಂಡರೂ, ಮನೆಯ ಅಂಗಳ ಹಾಗು ಛಾವಣಿಯಲ್ಲಿ ಅವುಗಳಿಗೆ ಸ್ವಲ್ಪ ಕಾಳು-ನೀರು ಇಟ್ಟು ಅವುಗಳ ರಕ್ಷಣೆಗೆ ನಿಮ್ಮ ಕಿಂಚಿತ್ ಕೊಡುಗೆ ನೀಡಿ. ನಿಮ್ಮ ಮನೆಯ ಸುತ್ತ ಸ್ಥಳಾವಕಾಶವಿದ್ದರೆ ಹೂವು ಹಣ್ಣು ಬಿಡುವಂತಹ ಗಿಡಗಳನ್ನು ಬೆಳೆಸಿ. ಆ ಗಿಡಗಳಲ್ಲಿ ದೊರೆಯುವ ಹುಳಗಳನ್ನು ತಿನ್ನಲಾದರು ಪಕ್ಷಿಗಳು ಬರುತ್ತವೆ.

ಪುಸ್ತಕ ಪರಿಚಯ - "ಮಹಾಬ್ರಾಹ್ಮಣ"

೫೫ನೇ ರಾಜ್ಯೋತ್ಸವದ ಶುಭಾಶಯಗಳು!



ಮಹಾಬ್ರಾಹ್ಮಣದ ಕಥೆ ಪ್ರಸಿದ್ಧರಾದ ವಸಿಷ್ಠ ವಿಶ್ವಾಮಿತ್ರರದು. ಕೌಶಿಕ ಮಹಾರಾಜ ವಸಿಷ್ಠರ ಬಳಿ ಇದ್ದ "ನಂದಿನಿ" ಎಂಬ ಹಸುವನ್ನು ಪಡೆಯಲು ಪ್ರಯತ್ನಿಸಿ, ವಿಫಲನಾಗಿ ಕೊನೆಗೆ ಅಹಂಭಾವವನ್ನು ತ್ಯಜಿಸಿ ವಿಶ್ವಕ್ಕೆ ಮಿತ್ರನಾದ "ವಿಶ್ವಾಮಿತ್ರ" ಬ್ರಹ್ಮರ್ಷಿಯಾಗಿ ಬದಲಾಗುವ ಕಥೆಯೇ ಮಹಾಬ್ರಾಹ್ಮಣ. ಹುಟ್ಟಿನಿಂದ ಕ್ಷತ್ರಿಯನಾದರೂ ಮುಂದೆ ಕರ್ಮದಿಂದ ಬ್ರಹ್ಮತ್ವವನ್ನು ಸಾಧಿಸಿದ ಬಗೆಯನ್ನು ಇಲ್ಲಿ ಚಿತ್ರಿಸಿದ್ದಾರೆ. ವಿಶ್ವಾಮಿತ್ರರ ಜೀವನದ ಬಗ್ಗೆ ಒಂದು ಒಳ್ಳೆ ಪರಿಚಯ ನೀಡಲಾಗಿದೆ.

ಲೇಖಕರು - ದೇವುಡು ನರಸಿಂಹಶಾಸ್ತ್ರಿ
ವಿತರಕರು - ಟಿ.ಎನ್.ಕೃಷ್ಣಯ್ಯಶೆಟ್ಟಿ ಅಂಡ್ ಸನ್, ಚಿಕ್ಕಪೇಟೆ, ಬೆಂಗಳೂರು